ಎಐಡಿಎಸ್ಓ ರಾಜ್ಯ ಸಮಿತಿಯಿಂದ 75ನೇ ಸ್ವಾತಂತ್ರ್ಯ ವರ್ಷಾಚರಣೆಯ ಹಿನ್ನೆಲೆ ರಾಜ್ಯಮಟ್ಟದ ಅಧ್ಯಯನ ಶಿಬಿರ
ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯಿಂದ 75ನೇ ಸ್ವಾತಂತ್ರ್ಯ ವರ್ಷಾಚರಣೆಯ ಹಿನ್ನೆಲೆ ಈ ದೇಶದ ಮಹಾನ್ ಕ್ರಾಂತಿಕಾರಿಗಳ ಜೀವನ- ಸಂಘರ್ಷದ ಕುರಿತು ಏಪ್ರಿಲ್ 2, 3 ಮತ್ತು 4 ರಂದು ಮೈಸೂರಿನಲ್ಲಿ ರಾಜ್ಯ ಮಟ್ಟದ ಅಧ್ಯಯನ ಶಿಬಿರವನ್ನು ಸಂಘಟಿಸಲಾಗಿದೆ ಎಂದು ಎಐಡಿಎಸ್ಓ ಜಿಲ್ಲಾ ಸಂಚಾಲಕರಾದ ಗಂಗರಾಜ ಅಳ್ಳಳ್ಳಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು ಈ ದೇಶದ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ವಿಚಾರಗಳು, ಆದರ್ಶ, ಮೌಲ್ಯಗಳು ಇಂದಿಗೂ ಪ್ರಸ್ತುತ ವಾಗಿದ್ದು, ಅವರ ವ್ಯಕ್ತಿತ್ವವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳುವುದು ಈ ಘಳಿಗೆಯ ಅವಶ್ಯಕತೆಯಾಗಿದೆ. ಈ ಮೂಲಕ ಇಂದಿನ ಶಿಕ್ಷಣದ ವ್ಯಾಪಾರೀಕರಣ ಹಾಗೂ ಸಾಮಾಜಿಕ ಸಮಸ್ಯೆಗಳಾದ ಬಡತನ, ನಿರುದ್ಯೋಗ, ಹೆಣ್ಣುಮಕ್ಕಳ ಮೇಲಿನ ಅಪರಾಧಗಳ ವಿರುದ್ಧ ಹೋರಾಡಲು ತಮ್ಮ ವ್ಯಕ್ತಿತ್ವ ವಿಕಸನಗೊಳಿಸಿಕೊಂಡು ಎಲ್ಲಾ ವಿದ್ಯಾರ್ಥಿಗಳು ಸಜ್ಜಾಗಬೇಕಿದೆ.
ಈ ನಿಟ್ಟಿನಲ್ಲಿ ಶಿಬಿರವನ್ನು ಸಂಘಟಿಸಲಾಗುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಶಿಬಿರದಲ್ಲಿ ವಿದ್ಯಾರ್ಥಿಗಳ ಚಳುವಳಿಯನ್ನು ಬೆಳೆಸುವ ಅವಶ್ಯಕತೆ, ವಿದ್ಯಾರ್ಥಿ ಹೋರಾಟದ ಮುಂದಿರುವ ಸವಾಲುಗಳು ಸೇರಿದಂತೆ ಇನ್ನಿತರ ಹಲವು ವಿಷಯಗಳ ಕುರಿತು ಚರ್ಚೆಗಳು, ಸಾಮಾಜಿಕ ಹಾಗೂ ಉತ್ತಮ ಅಭಿರುಚಿಯ ಸಿನಿಮಾ ಪ್ರದರ್ಶನ, ಸಾಂಸ್ಕ್ರತಿಕ ಹಾಗೂ ಕ್ರೀಡಾ ಚಟುವಟಿಕೆಗಳು ನಡೆಯಲಿವೆ. ಕೊಪ್ಪಳದಿಂದ ಭಾಗವಹಿಸಲು ಇಚ್ಚಿಸುವ ಆಸಕ್ತ ವಿದ್ಯಾರ್ಥಿಗಳು ಸಂಪರ್ಕಿಸಬಹುದು ಎಂದಿದ್ದಾರೆ.
Tags
ರಾಜ್ಯ