ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ : ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್ ವಿರುದ್ಧ ಪ್ರಕರಣ ದಾಖಲು
ಯಲಬುರ್ಗಾ : ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ನಾಮಪತ್ರ ಸಲ್ಲಿಸುವ ದಿನದಂದು ನಾಮಪತ್ರ ಸಲ್ಲಿಸುವ ಸಮಯದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್ ಮರೀಬಸಪ್ಪ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ದಿನಾಂಕ 19 ರಂದು ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ಮೆರವಣಿಗೆಯಲ್ಲಿ ಮೂವರು ಮಕ್ಕಳನ್ನು ಪ್ರಚಾರಕ್ಕೆ ಬಳಸಿರುವುದು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗಿದ್ದು ಇದರ ಅಡಿಯಲ್ಲಿ ಎಫ್ ಎಸ್ ಟಿ ತಂಡದ ಅಧಿಕಾರಿಗಳು ಮಂಡಲ ಅಧ್ಯಕ್ಷ ವಿಶ್ವನಾಥ್ ವಿರುದ್ದ ಪ್ರಕರಣ ದಾಖಳಿಸಿದ್ದಾರೆ.
ದಿನಾಂಕ 19 ರಂದು ನಡೆದ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಅವರ ನಾಮಪತ್ರ ಮೆರವಣಿಗೆ ಬಿಜೆಪಿ ಮಂಡಲ ಅಧ್ಯಕ್ಷರು ಚುನಾವಣೆ ನಿಯಮಗಳನ್ನು ಪಾಲಿಸುವುದಾಗಿ ಅನುಮತಿ ಪಡೆದಿದ್ದರು. ಆದರೂ ಕೂಡಾ ಮೂವರು ಚಿಕ್ಕ ಮಕ್ಕಳು ಮೆರವಣಿಗೆ ಸಮಯದಲ್ಲಿ ಬಿಜೆಪಿ ಪಕ್ಷದ ಬಾವುಟ ಹಿಡಿದು ಮೆರವಣಿಗೆಯಲ್ಲಿ ಇದ್ದುದ್ದು ಕಂಡು ಬಂದಿತ್ತು.
ಸದ್ಯ ಎಫ್ ಎಸ್ ಟಿ ತಂಡದ ಅಧಿಕಾರಿಗಳು ಸದರಿಯವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ದೂರು ನೀಡಿದ್ದು, ಠಾಣೆ ಗುನ್ನೇ 48/2023 ಕಲಂ 14 ಬಾಲ ಕಾರ್ಮಿಕ ಪದ್ಧತಿ ನಿಷೇದ ಕಾಯ್ದೆ 1986 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ವರದಿ : ಈರಯ್ಯ ಕುರ್ತಕೋಟಿ