ಏ.2 ರಂದು ಕೊಪ್ಪಳದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಪ್ರಚಾರ ಸಭೆ
ಕೊಪ್ಪಳ,: ಮಾಜಿಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಕೊಪ್ಪಳಕ್ಕೆ ಏ.2 ರಂದು ಮಂಗಳವಾರ ಮತಯಾಚನೆ ಹಾಗೂ ಪ್ರಚಾರ ಸಭೆ ನೆಡಸಲಿದ್ದಾರೆಂದು ಎಂದು ಜೆಡಿಎಸ್ ವಿಧಾನಸಭಾ ಅಭ್ಯರ್ಥಿ ಸಿವಿ ಚಂದ್ರಶೇಖರ ಹೇಳಿದರು. ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಕುಮಾರಸ್ವಾಮಿ ಹಾಗೂ ಸಿಎಂ ಇಬ್ರಾಹಿಂ ಏ.2ರ ಸಂಜೆ 5 ಗಂಟೆಗೆ ನಗರದ ತಾಲೂಕು ಕ್ರೀಡಾಂಗಣದಲ್ಲಿ ಬೃಹತ್ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಜಿಲ್ಲಾ ಹಾಗೂ ತಾಲೂಕ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಕ್ಷೇತ್ರಾದ್ಯಂತ ಜೆಡಿಎಸ್ ಪರವಾಗಿ ವ್ಯಾಪಕವಾದ ಅಲೆ ಬೀಸುತ್ತಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ನೇರ ಹಣಾಣಿಯಿದ್ದು, ಗೆಲುವು ಶತ:ಸಿದ್ಧ. ಕುಮಾರಸ್ವಾಮಿಯವರು ಈ ರಾಜ್ಯದ ಭಾವಿ ಮುಖ್ಯಮಂತ್ರಿಗಳು ಎಂದರು.
ಕ್ಷೇತ್ರದಲ್ಲಿ ನೆಡೆಯುತ್ತಿರುವುದು ವ್ಯಕ್ತಿ ಆಧಾರಿತ ಚುನಾವಣೆ. ಪ್ರಚಾರಕ್ಕೆ ಹೋದಲ್ಲೆಲ್ಲಾ ಜನ ಸಾಗರೋಪಾದಿಯಲ್ಲಿ ಸೇರುತ್ತಿದ್ದಾರೆ. ಈಗಾಗಲೇ ವಿವಿಧ ಪಕ್ಷಗಳ 180 ಗ್ರಾಮ ಪಂಚಾಯತ ಸದಸ್ಯರು ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಹಿರೇ ಸಿಂದೋಗಿ, ಹಲಗೇರಿ, ಶಿವಪುರ, ಗೊಂಡಬಾಳ ಹಾಗೂ ಇತರೆ ಗ್ರಾಮಗಳಲ್ಲಿಯೂ ಸ್ಥಳೀಯ ಸಂಸ್ಥೆಗಳ ಸದಸ್ಯರುಗಳು ಸೇರ್ಪಡೆಯಾಗಿದ್ದಾರೆ ಎಂದರು. ಈ ವೇಳೆ ಜಿಲ್ಲಾಧ್ಯಕ್ಷ ವೀರೇಶ ಮಹಾಂತಯ್ಯನಮಠ, ಮುಖಂಡರಾದ ಶಿವಕುಮಾರ ಹಕ್ಕಾಪಕ್ಕಿ, ಕರಾಟೆ ಮೌನೇಶ ಇದ್ದರು.
ವರದಿ : ಶಿವಕುಮಾರ ಹಿರೇಮಠ