12 ವರ್ಷದ ಬಿಜೆಪಿ ಆಡಳಿತದಲ್ಲಿ ಅಭಿವೃದ್ಧಿ ಶೂನ್ಯ : ರಾಯರಡ್ಡಿ
ಕುಕನೂರು : ಕರ್ನಾಟಕದಲ್ಲಿ ಬಿಜೆಪಿ 12 ವರ್ಷಗಳ ಕಾಲ ಆಡಳಿತ ನಡೆಸಿದೆ, ಆದರೆ ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕೆಲಸ ಆಗಲಿಲ್ಲ, ಬದಲಾಗಿ ಭ್ರಷ್ಟಾಚಾರ, ಜಾತಿ ರಾಜಕಾರಣ ಮಿತಿ ಮೀರಿದೆ ಎಂದು ಮಾಜಿ ಸಚಿವ, ಯಲಬುರ್ಗಾ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ್ ರಾಯರಡ್ಡಿ ಹೇಳಿದರು.
ಕುಕನೂರು ಪಟ್ಟಣದ ತೆರಿನ ಗಡ್ಡಿ ಹತ್ತಿರ ಕಮ್ಮಿಕೊಂಡಿದ್ದ ಕಾಂಗ್ರೆಸ್ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಬಸವರಾಜ್ ರಾಯರಡ್ಡಿ ಅವರು, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿ, ಬೆಲೆ ಏರಿಕೆ, ಭ್ರಷ್ಟಾಚಾರ ದಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ, ಬಿಜೆಪಿ ಬಾರಿ ಧರ್ಮ, ಜಾತಿ ಆಧಾರದಲ್ಲಿ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ರಾಯರಡ್ಡಿ ಬಿಜೆಪಿ ವಿರುದ್ದ ಟೀಕೆ ಮಾಡಿದರು.
ಯಲಬುರ್ಗಾ ಕ್ಷೇತ್ರದಲ್ಲಿ 5 ವರ್ಷ ಅಧಿಕಾರ ಮಾಡಿದ ಹಾಲಪ್ಪ ಆಚಾರ್ ಅವರಿಂದ ಯಾವುದೇ ಕೆಲಸಗಳು ಆಗಿಲ್ಲ, ಕುಕನೂರು ಹೊಸ ತಾಲೂಕು ರಚನೆಯಾಗಿ 5 ವರ್ಷ ಕಳೆದರೂ ಆಡಳಿತ ಕಚೇರಿ ಆಗಿಲ್ಲ, ಇಲಾಖೆಗಳು ಬಂದಿಲ್ಲ, ಕುಕನೂರು ಹೊಸ ತಾಲೂಕು ಘೋಷಣೆ ಯಾದರೂ ಯಲಬುರ್ಗಾ ಜನತೆ ಅಗತ್ಯ ಕೆಲಸಗಳಿಗೆ ಇನ್ನೂ ಕೂಡಾ ಯಲಬುರ್ಗಾ ಪಟ್ಟಣಕ್ಕೆ ಹೋಗಬೇಕಿದೆ, ಎಂದು ರಾಯರಡ್ಡಿ ಹೇಳಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣವೇ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತೇವೆ, ಜನಪರ, ಬಡವರ ಪರ, ಅಭಿವೃದ್ಧಿ ಗಾಗಿ ಕಾಂಗ್ರೆಸ್ ಬೆಂಬಲಿಸಿ, ಗೆಲ್ಲಿಸಿ ಎಂದು ಅಭ್ಯರ್ಥಿ ಬಸವರಾಜ್ ರಾಯರಡ್ಡಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹನುಮಂತ ಗೌಡ ಚೆಂಡೂರು, ಬಸವರಾಜ್ ಉಳ್ಳಾಗಡ್ಡಿ, ಹುಸೇನ್ ಸಾಬ್ ತಳಕಲ್, ಯಂಕಣ್ಣ ಯರಾಶಿ, ರಾಮಣ್ಣ ಬಜೇಂತ್ರಿ, ಬಿ ಎಂ, ಶಿರೂರ್, ಸಿದ್ದಯ್ಯ ಕಳ್ಳಿಮಠ, ಮಂಜುನಾಥ್ ಕಡೆಮನಿ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು..
ವರದಿ ; ಈರಯ್ಯ ಕುರ್ತಕೋಟಿ