ಆಗ್ನೆಯ ಅರಬ್ಬಿ ಸಮುದ್ರದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತವು ಮಂಗಳವಾರ ಸಂಜೆ ಚಂಡಮಾರುತವಾಗಿ ರೂಪಾಂತರಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಚಂಡಮಾರುತಕ್ಕೆ 'ಬಿಪರ್ಜೋಯ್' ಎಂಬ ಹೆಸರನ್ನು ಬಾಂಗ್ಲಾದೇಶ ನೀಡಿದೆ.
'ಆಗ್ನೆಯ ಮತ್ತು ಪೂರ್ವ-ಮಧ್ಯ ಅರಬ್ಬಿ ಸಮುದ್ರದ ಮೇಲಿನ ವಾಯುಭಾರ ಕುಸಿತದ ವಿದ್ಯಮಾನವು ಸುಮಾರು 40 ಕಿಮೀ ವೇಗದಲ್ಲಿ ಉತ್ತರದ ಕಡೆಗೆ ಚಲಿಸಿದ್ದು, ಚಂಡಮಾರುತವಾಗಿ ತೀವ್ರ ರೂಪ ಪಡೆದುಕೊಂಡಿದೆ. ಗೋವಾದಿಂದ ಸುಮಾರು 920 ಕಿಮೀ ದೂರದಲ್ಲಿ ಚಂಡಮಾರುತವು ಕೇಂದ್ರೀಕೃತವಾಗಿದೆ. ಮುಂಬೈನಿಂದ ನೈರುತ್ಯಕ್ಕೆ 1050 ಕಿ.ಮೀ, ಪೋರಬಂದರ್ನಿಂದ ದಕ್ಷಿಣ- ನೈಋತ್ಯಕ್ಕೆ 1130 ಕಿ.ಮೀ ದೂರದಲ್ಲಿ ಚಂಡಮಾರುತವಿದೆ' ಎಂದು ಐಎಂಡಿಯ ಬುಲೆಟಿನ್ನಲ್ಲಿ ತಿಳಿಸಿದೆ.
ಚಂಡಮಾರುತವು ಉತ್ತರಕ್ಕೆ ಚಲಿಸುವ ಸಾಧ್ಯತೆಯಿದೆ ಮತ್ತು ಕ್ರಮೇಣ ಮತ್ತಷ್ಟು ತೀವ್ರತೆ ಪಡೆದುಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಜೂನ್ 6 ರಂದು ಕೇರಳ-ಕರ್ನಾಟಕ ಕರಾವಳಿ ಮತ್ತು ಲಕ್ಷದ್ವೀಪ-ಮಾಲೀವ್ ಪ್ರದೇಶಗಳಲ್ಲಿ, ಜೂನ್ 8 ರಿಂದ ಜೂನ್ 10 ರವರೆಗೆ ಕೊಂಕಣ-ಗೋವಾ-ಮಹಾರಾಷ್ಟ್ರ ಕರಾವಳಿಯಲ್ಲಿ ಸಮುದ್ರದಲ್ಲಿನ ಪರಿಸ್ಥಿತಿಗಳು ವಿಪರೀತಕ್ಕೆ ತಲುಪುವ ಸಾಧ್ಯತೆಗಳಿವೆ. ಹೀಗಾಗಿ ಸಮುದ್ರದಲ್ಲಿರುವ ಮೀನುಗಾರರು ಹಿಂದೆ ಬರಲು ಸೂಚಿಸಲಾಗಿದೆ.
ಅರಬ್ಬಿ ಸಮುದ್ರದಲ್ಲಿನ ಈ ವಿದ್ಯಮಾನ ಮುಂಗಾರು ಮಾರುತಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ಸೋಮವಾರವಷ್ಟೇ ಹೇಳಿತ್ತು. ಆದರೆ, ಮಾರುತಗಳು ಕೇರಳಕ್ಕೆ ಯಾವಾಗ ಪ್ರವೇಶಿಸಲಿವೆ ಎಂಬುದನ್ನು ಇನ್ನೂ ಖಚಿತಪಡಿಸಿಲ್ಲ. ಜೂನ್ 8 ಅಥವಾ 9ರಂದು ಮಾರುತಗಳು ಕೇರಳ ಪ್ರವೇಶಿಸಬಹುದು ಎಂದು ಖಾಸಗಿ ಸಂಸ್ಥೆ 'ಸೈಮೆಟ್ ತಿಳಿಸಿದೆ.
'ಅರಬ್ಬಿ ಸಮುದ್ರದಲ್ಲಿನ ಈ ಪ್ರಬಲ ಹವಾಮಾನ ವ್ಯವಸ್ಥೆಗಳು ಮಾನ್ಸೂನ್ ಪ್ರವೇಶವನ್ನು ಹಾಳುಮಾಡಲಿವೆ. ಮಾನ್ಸೂನ್ ಮಾರುತಗಳು ಕರಾವಳಿ ಭಾಗಗಳನ್ನು ತಲುಪಿದರೂ, ಚಂಡಮಾರತದ ಪರಿಣಾಮವಾಗಿ ಪಶ್ಚಿಮ ಘಟ್ಟಗಳ ಅಚೆಗೆ ಹೋಗುವುದು ಕಷ್ಟವಾಗಬಹುದು' ಎಂದು 'ಸೈಮೆಟ್' ಹೇಳಿದೆ.
ವರದಿ : ಕೀರಾ