ಹತ್ತು ಸಾವಿರ ಮನೆ ನಿರ್ಮಾಣದ ಗುರಿ.
ವಸತಿ ಯೋಜನೆಗಾಗಿ ಯಾರೂ ಲಂಚ ಕೊಡಬೇಡಿ : ಬಸವರಾಜ್ ರಾಯರಡ್ಡಿ
ಕುಕನೂರು : ಯಲಬುರ್ಗಾ ಮತ್ತು ಕುಕನೂರಿನ ಅವಳಿ ತಾಲೂಕಿನಲ್ಲಿ ಇನ್ನೂ ಎರಡು ಮೂರು ವರ್ಷದಲ್ಲಿ ಎಲ್ಲರಿಗೂ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು, ಇದಕ್ಕಾಗಿ ಸುಮಾರು ಹತ್ತು ಸಾವಿರ ಮನೆ ನಿರ್ಮಾಣದ ಗುರಿ ಹೊಂದಲಾಗಿದೆ. ಜನಪರ, ಪಾರದರ್ಶಕ ಆಡಳಿತ ನೀಡಲು ತಾವು ಬದ್ದರಾಗಿದ್ದು ವಸತಿ ಯೋಜನೆ ಪಡೆಯಲು ಯಾರೂ ಕೂಡಾ ಲಂಚ ಕೊಡಬೇಡಿ, ಅಧಿಕಾರಿಗಳು ಕೂಡಾ ಲಂಚ ಪಡೆಯಬಾರದು ಎಂದು ಯಲಬುರ್ಗಾ ಶಾಸಕರಾದ ಬಸವರಾಜ್ ರಾಯರಡ್ಡಿ ಅವರು ಹೇಳಿದರು.
ತಾಲೂಕಿನ ಕಕ್ಕಿಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಶಾಸಕ ರಾಯರಡ್ಡಿ ಅವರು,ಅವಳಿ ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಸುಧಾರಿಸಬೇಕಿದೆ. ಪಾರದರ್ಶಕ, ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಒತ್ತು ಕೊಡಬೇಕಿದ್ದು,ಅಧಿಕಾರಿಗಳು ಸಹಕರಿಸಬೇಕು, ಜನಸಾಮಾನ್ಯರು ಯಾರೂ ಲಂಚ ಕೊಡಬೇಡಿ, ಅಧಿಕಾರಿಗಳು ಲಂಚ ತಗೋಬೇಡಿ ಭ್ರಷ್ಟಾಚಾರ ಮುಕ್ತ ಆಡಳಿತ , ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದಂತೆ ಆಡಳಿತ ವ್ಯವಸ್ಥೆ ಸುಧಾರಿಸಲು ಪ್ರಯತ್ನಿಸುವೆ ಎಂದು ಬಸವರಾಜ್ ರಾಯರಡ್ಡಿ ಹೇಳಿದರು.
ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುತ್ತೇವೆ, ಯಾವುದೇ ಗೊಂದಲವಿಲ್ಲ. ಇದಕ್ಕಾಗಿ ರಾಜ್ಯ ಸರ್ಕಾರ ಪ್ರತೀ ವರ್ಷ 50 ಸಾವಿರ ಕೋಟಿ ಖರ್ಚು ಮಾಡುತ್ತದೆ, ಇದೆಲ್ಲಾ ಜನರ ಕಲ್ಯಾಣಕ್ಕಾಗಿ ಎಂದು ರಾಯರಡ್ಡಿ ಹೇಳಿದರು.
ತಾಲೂಕಿನಲ್ಲಿ ಹತ್ತು ಸಾವಿರ ಮನೆಗಳ ನಿರ್ಮಾಣದ ಗುರಿ ಹೊಂದಲಾಗಿದ್ದು ಇನ್ನೂ ಎರಡು ಮೂರು ವರ್ಷಗಳಲ್ಲಿ ತಾಲೂಕಿನ ಎಲ್ಲರಿಗೂ ವಸತಿ ಸೌಕರ್ಯ ಒದಗಿಸಲಾಗುವುದು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪಣ ತೊಡಲಾಗಿದೆ ಎಂದು ಶಾಸಕ ಬಸವರಾಜ್ ರಾಯರಡ್ಡಿ ಹೇಳಿದರು.
ಈ ಸಂದರ್ಭದಲ್ಲಿ ಕುಕನೂರು ತಹಸೀಲ್ದಾರ್ ಎಂ ನೀಲಪ್ರಭಾ, ತಾ. ಪಂ ಈ ಓ ರಾಮಣ್ಣ ದೊಡ್ಡಮನಿ, ಸಿ ಡಿ ಪಿ ಓ ಸಿಂಧೂ ಎಲಿಗಾರ, ತಾಲೂಕಿನ ಅಧಿಕಾರಿ ವರ್ಗ ಸೇರಿದಂತೆ ಕಾಂಗ್ರೆಸ್ ಮುಖಂಡರಾದ ಕಾಸಿಂ ಸಾಬ್ ತಳಕಲ್, ನಾರಾಯಣಪ್ಪ ಹರಪನಹಳ್ಳಿ, ಹನುಮಂತ ಗೌಡ ಚೆಂಡೂರು, ಮಂಜುನಾಥ್ ಕಡೆಮನಿ, ಮಲ್ಲಿಕಾರ್ಜುನ ಬಿನ್ನಾಳ, ಮೇಘರಾಜ್ ಬಳಗೇರಿ, ಯಮನೂರಪ್ಪ ಕಟ್ಟಿಮನಿ, ವಿರೂಪಾಕ್ಷಯ್ಯ ಕುರ್ತಕೋಟಿ, ಪ್ರಬಯ್ಯಾ ಕೆಂಭಾವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಈರಯ್ಯ ಕುರ್ತಕೋಟಿ