ಡಿಗ್ರಿ ಕಾಲೇಜಿನಲ್ಲಿ ರಾಜ್ಯಮಟ್ಟದ ವೃತ್ತಿ ಪದೋನ್ನತಿ ಮಾಹಿತಿ ಕಾರ್ಯಾಗಾರ
ಕೊಪ್ಪಳ,: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಜೊತೆಗೆ ಅಧ್ಯಾಪಕರ ಬೋಧನಾ ಕಾರ್ಯದಕ್ಷತೆ ಹಾಗೂ ವೈಯಕ್ತಿಕ ವೃತ್ತಿ ಪದೊನ್ನತಿಗೆ ಬೇಕಾದ ಅನೇಕ ಕೌಶಲ್ಯಗಳನ್ನು ಮತ್ತು ಅಕಾಡೆಮಿಕ್ ಪರಿಣಿತತೆಯನ್ನು ಕರ ತತ್ವಗತ ಮಾಡಿಕೊಳ್ಳಬೇಕಾದದ್ದು ಇಂದಿನ ಅಗತ್ಯವಾಗಿದೆ ಎಂದು ಬೆಂಗಳೂರಿನ ಸರಕಾರಿ ಆರ್.ಸಿ. ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಸತೀಶ್ .ಎಚ್.ಕೆ ಅವರು ಕೊಪ್ಪಳ ತಾಲೂಕಿನ ಇರಕಲ್ಲಗಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ಪದವಿ ಕಾಲೇಜುಗಳ ಅಧ್ಯಾಪಕರ ವೃತ್ತಿಪದೊನ್ನತಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ತಿಮ್ಮಾರೆಡ್ಡಿ ಮೇಟಿ ಅವರು, ಅಧ್ಯಾಪಕರು ತಮ್ಮ ವೃತ್ತಿ ಬದುಕಿನ ಉದ್ದಕ್ಕೂ ಹಲವು ಹಂತಗಳಲ್ಲಿ ಪದೋನ್ನತಿಯನ್ನು ಪಡೆಯುತ್ತಾರೆ. ಅದರಲ್ಲಿ ಕಾಲಮಿತಿ ಪದೋನ್ನತಿಯ ಜೊತೆಗೆ ಕಾರ್ಯದಕ್ಷತೆ ಆಧಾರದ ಮೇಲೆ ಪದೋನ್ನತಿಯನ್ನು ನೀಡುವುದು ಇಂದಿನ ಶೈಕ್ಷಣಿಕ ಪ್ರಕ್ರಿಯೆಯ ಪ್ರಮುಖ ಉದ್ದೇಶವಾಗಿದೆ. ಆದ್ದರಿಂದ ಅಧ್ಯಾಪಕರು ಬೋಧನಾ ಕಲಿಕಾ ಪ್ರಕ್ರಿಯೆ ಮತ್ತು ಮೌಲ್ಯಮಾಪನದ ಜೊತೆಗೆ ಸಂಶೋಧನಾ ಪ್ರವೃತ್ತಿಯನ್ನು ರೂಢಿಸಿಕೊಳ್ಳುವುದು ಮುಖ್ಯ ಎಂದರು. ಇರಕಲ್ಗಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಉಮೇಶ ಅಧ್ಯಕ್ಷತೆಯನ್ನು ವಹಿಸಿದ್ದರು. ಕೊಪ್ಪಳ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ವಿಠೋಬ.ಎಸ್. ಹಾಗೂ ಗೌರಿಬಿದನೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸುರೇಶ್ ಬಾಬು ಎಂ.ಜಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಲೇಜಿನ ಐಕ್ಯೂಎಸಿ ಘಟಕದ ಸಂಯೋಜಕ ಪ್ರಕಾಶ್ ಗೌಡ ಎಸ್ .ಯು. ಪ್ರಸ್ತಾವಿಕವಾಗಿ ಮಾತನಾಡಿದರು. ಐಕ್ಯೂಎಸಿ ಸಹ ಸಂಚಾಲಕಿ ಪ್ರೊ. ಅನಿತಾ ಎಂ ಪಾಟೀಲ್, ಪ್ರೊ.ಶಂಕ್ರಯ್ಯ ಅಬ್ಬಿಗೇರಿಮಠ, ಪ್ರೊ.ಆಶಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕರಾದ ಹುಚ್ಚಪ್ಪ ನೆರೆಗಲ್ ಸ್ವಾಗತಿಸಿ,ಪ್ರೊ.ಅನಿತಾ ಶಿವಗಂಗೆ ಪ್ರಾರ್ಥಿಸಿ, ಪ್ರೊ. ಚಿನ್ನುತಾಯಮ್ಮ ವಂದಿಸಿ, ಪ್ರೊ.ದಿವ್ಯ ನಿರೂಪಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ 65ಕ್ಕೂ ಹೆಚ್ಚು ಸಹಾಯಕ ಹಾಗೂ ಸಹ ಪ್ರಾಧ್ಯಾಪಕರು ಕಾರ್ಯಗಾರದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಂಡರು.
ವರದಿ : ಶಿವಕುಮಾರ್ ಹಿರೇಮಠ