ಕುಕನೂರು : ತಾಲೂಕಿನ ಬಾನಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಮಸೀದಿಯನ್ನು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಶುಕ್ರವಾರ ಉದ್ಘಾಟನೆ ಮಾಡಿದರು.
ನಂತರ ಮಾತನಾಡಿದ ಗವಿಶ್ರೀಗಳು, ಪ್ರತಿಯೊಬ್ಬ ಮನುಷ್ಯನೂ ಸಾಮರಸ್ಯದಿಂದ ಬಾಳಬೇಕು, ಧರ್ಮ ಸಮನ್ವಯಯತೆ ಮೈಗೂಡಿಸಿಕೊಳ್ಳಬೇಕು, ಪರಧರ್ಮ ಸಹಿಷ್ಣುತೆ ಬೆಳಸಿಕೊಳ್ಳಬೇಕು.
ಭಾವೈಕ್ಯತೆಯಿಂದ ಬಾಳುವುದೇ ನಿಜವಾದ ಧರ್ಮ ಎಂದು ಹೇಳಿದರು.
ಆಸ್ಪತ್ರೆಯಲ್ಲಿ ರಕ್ತದ ಅವಶ್ಯಕತೆ ಇದ್ದವರಿಗೆ ರಕ್ತ ನೀಡಿ ಒಬ್ಬರ ಜೀವ ಉಳಿಸುವುದು ನಿಜವಾದ ಮಾನವ ಧರ್ಮ, ಬರೀ ದೇವಸ್ಥಾನಕ್ಕೆ, ಮಸೀದಿಗೆ ಹೋಗುವುದರಿಂದ ಧರ್ಮವಂತರಾಗುವುದಿಲ್ಲ, ಬದಲಾಗಿ ಇನ್ನೊಬ್ಬರ ಮನಸ್ಸಿಗೆ ನೋವುಂಟು ಮಾಡದಂತೆ, ಮೋಸ ಮಾಡದಂತೆ ಬದುಕುವುದು, ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವವನೆ ನಿಜವಾದ ಧರ್ಮವಂತ ಎಂದು ಅಭಿನವ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.
ಈ ಸಂದರ್ಭದಲ್ಲಿ ರೆಹಿಮಾನ್ಸಾಬ್ ನದಾಫ್, ಚಂದ್ರಶೇಖರಯ್ಯ ಹಿರೇಮಠ,ಮಹಮ್ಮದ್ ರಫಿ,ನೀಲಕಂಠಯ್ಯ ಸಸಿಮಠ, ಜೀವನ್ ಸಾಬ್ ನದಾಫ್ ಇತರರು ಇದ್ದರು.
ವರದಿ : ಈರಯ್ಯ ಕುರ್ತಕೋಟಿ