ಸಾರಾಂಶ :
ಜ್ಞಾನವಾಪಿ ಮಸೀದಿಯ ಎಎಸ್ಐ ವರದಿಯಲ್ಲಿ ಗಣೇಶ, ನಂದಿ, ಹನುಮನ ಚಿತ್ರಗಳು ಇವೆ ಎನ್ನಲಾಗಿದೆ. ಜೊತೆಗೆ ಶಿವಲಿಂಗ ಇರಿಸುವ ಯೋನಿಪಟ್ಟಾ ಚಿತ್ರ ಕೂಡ ಬಹಿರಂಗವಾಗಿದೆ ಎನ್ನಲಾಗಿದೆ. ಇದರಿಂದಾಗಿ ಇಲ್ಲಿ ಶಿವಲಿಂಗ ಇತ್ತೆಂದು ಸಾಬೀತಾಗಿದೆ ಎಂದು ಹಿಂದೂ ಪಕ್ಷಗಾರರು ತೀರ್ಮಾನಕ್ಕೆ ಬಂದಿದ್ದಾರೆ.
ವಾರಾಣಸಿ: ‘ಕಾಶಿ ವಿಶ್ವನಾಥ ಮಂದಿರ ಬಳಿಯ ಜ್ಞಾನವಾಪಿ ಮಸೀದಿ ಈ ಹಿಂದೆ ಮಂದಿರವಾಗಿತ್ತು. ಅದನ್ನು ಕೆಡವಿ ಅದರ ಮೇಲೆ ಮಸೀದಿ ಕಟ್ಟಲಾಯಿತು’ ಎಂಬ ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಎಎಸ್ಐ) ಸಮೀಕ್ಷೆಯ ಬೆನ್ನಲ್ಲೇ, ಸಮೀಕ್ಷೆಯಲ್ಲಿ ಇವೆ ಎನ್ನಲಾದ ಹಿಂದೂ ವಿಗ್ರಹಗಳ ಫೋಟೋಗಳು ಬಹಿರಂಗಗೊಂಡಿವೆ.
ಈ ಫೋಟೋಗಳು ಎಎಸ್ಐ ಸಮೀಕ್ಷೆಯಲ್ಲಿ ಇವೆ ಎಂದು ‘ಇಂಡಿಯಾ ಟುಡೇ’ ಟೀವಿ ವರದಿ ಮಾಡಿದೆ.ಹನುಮಂತ, ಗಣೇಶ ಮತ್ತು ನಂದಿಯಂತಹ ಹಿಂದೂ ದೇವತೆಗಳ ಮುರಿದ ವಿಗ್ರಹಗಳ ಫೋಟೋಗಳು ಎಎಸ್ಐಗೆ ಸಿಕ್ಕಿವೆ.
ಇದರ ಜತೆಗೆ ಯೋನಿಪಟ್ಟಾಗಳು (ಶಿವಲಿಂಗದ ತಳಭಾಗ) ಕೂಡ ಸಿಕ್ಕಿದೆ. ಇದು ಈ ಸ್ಥಳದಲ್ಲಿ ಶಿವಲಿಂಗ ಇತ್ತೆಂಬುದನ್ನು ತೋರಿಸುತ್ತದೆ ಎಂದು ವರದಿ ಹೇಳಿದೆ.ಹನುಮಂತನ ಮೂರ್ತಿ ಅಮೃತಶಿಲೆಯಲ್ಲಿದೆ.
ಆದರೆ ಅದರ ಎಡಗೈ ಕಾಣೆಯಾಗಿದೆ. ಇನ್ನು ಗಣೇಶನ ಮೂರ್ತಿಯನ್ನು ಟೆರ್ರಾಕೋಟಾದಿಂದ ಸಿದ್ಧಪಡಿಸಲಾಗಿದೆ.
ಇನ್ನು ಹಲವು ನಾಣ್ಯಗಳು ಕೂಡ ಸಿಕ್ಕಿದ್ದು, ಅವುಗಳ ಮೇಲೆ ಪರ್ಷಿಯನ್ ಭಾಷೆಯ ದಂತಕತೆಯಿದೆ. ಇವನ್ನು ಅರಸ ಶಾ ಆಲಂ-2 ಬಿಡುಗಡೆ ಮಾಡಿದ್ದ ಎನ್ನಲಾಗಿದೆ.
ಇನ್ನು ಪರ್ಷಿಯನ್ ಪಠ್ಯದೊಂದಿಗೆ ಕೆತ್ತಲಾದ ಮರಳುಗಲ್ಲಿನ ಚಪ್ಪಡಿಯ ಫೋಟೋ ಕೂಡ ತನಗೆ ಲಭಿಸಿದೆ ಎಂದು ಎಎಸ್ಐ ಹೇಳಿಕೊಂಡಿದೆ.
‘839 ಪುಟಗಳಷ್ಟು ವ್ಯಾಪಿಸಿರುವ ಛಾಯಾಚಿತ್ರಗಳು ಮತ್ತು ವರದಿಯು, ಜ್ಞಾನವಾಪಿ ಮಸೀದಿಯನ್ನು ಮೊದಲೇ ಅಸ್ತಿತ್ವದಲ್ಲಿದ್ದ ಹಿಂದೂ ದೇವಾಲಯದ ಅವಶೇಷಗಳ ಮೇಲೆ ನಿರ್ಮಿಸಲಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ’ ಎಂದು ವರದಿ ಬಹಿರಂಗಪಡಿಸಿದ ಹಿಂದೂ ಪರ ವಕೀಲ ವಿಷ್ಣುಶಂಕರ ಜೈನ್ ಹೇಳಿದ್ದಾರೆ.
ಈ ವಾದಕ್ಕೆ ಆಧಾರವಿಲ್ಲ- ಮುಸ್ಲಿಂ ಪಕ್ಷಗಾರರು: ಆದರೆ ಹಿಂದೂ ಪಕ್ಷಗಾರರು ಹಾಗೂ ಎಎಸ್ಐ ಅನಿಸಿಕೆಯನ್ನು ಮುಸ್ಲಿಂ ಪಕ್ಷಗಾರರು ನಿರಾಕರಿಸಿದ್ದಾರೆ. ಅಂಜುಮನ್ ಅಂಜಾಮಿಯಾ ಮಸ್ಜಿದ್ ಪರ ವಕೀಲ ಅಖ್ಲಾಕ್ ಅಹ್ಮದ್ ಮಾತನಾಡಿ, ‘ಈ ಹಿಂದೆ ಕೋರ್ಟ್ ರಚಿತ ಅಡ್ವೋಕೇಟ್ ಕಮಿಷನ್ನವರು ಸಮೀಕ್ಷೆ ನಡೆಸಿದಾಗಲೂ ಈ ವಿಗ್ರಹ ಪತ್ತೆ ಮಾಡಿದ್ದರು.
ಎಎಸ್ಐ ಈತ ತನ್ನ ಸಮೀಕ್ಷೆಯಲ್ಲಿ ಈ ವಿಗ್ರಹಗಳು ಎಷ್ಟು ಉದ್ದ-ಅಗಲವಿವೆ ಎಂಬುದನ್ನು ಅಳೆದಿದೆಯಷ್ಟೆ. ಅಲ್ಲದೆ, ಎಎಸ್ಐ ಈ ವಿಗ್ರಹಗಳು ಎಷ್ಟ ಹಳೆಯವು ಎಂಬುದನ್ನು ಹೇಳುವಲ್ಲಿ ವಿಫಲವಾಗಿದೆ’ ಎಂದಿದ್ದಾರೆ.