ದೇವಸಮುದ್ರದಲ್ಲಿ ಗಂಟೆ ಶಾಸನ ಪತ್ತೆ
ಕಂಪ್ಲಿ: ದೇವಸಮುದ್ರ ಗ್ರಾಮದ ಲಕ್ಷ್ಮೀ ನಾರಾಯಣ ದೇವಾಲಯದ ಗಂಟೆ ಮೇಲೆ 18ನೇ ಶತಮಾನದ ಶಾಸನವೊಂದು ಬೆಳಕಿಗೆ ಬಂದಿದೆ.
ಗಂಗಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ.ಪಿ.ಬಿ. ಮಂಜಣ್ಣ ಅವರು ಪತ್ತೆ ಹಚ್ಚಿದ್ದಾರೆ. ದೇವಾಲಯದಲ್ಲಿ ಕಟ್ಟಿರುವ ತಾಮ್ರದ ಗಂಟೆ ಮೇಲೆ ಮೂರು ಸಾಲುಗಳಲ್ಲಿ ಶಾಸನ ಬರೆಯಲ್ಪಟ್ಟಿದೆ. ಶಾಸನದಲ್ಲಿ 'ಶ್ರೀ ಲಕ್ಷ್ಮೀ ನಾರಾಯಣ ಸ್ವಸ್ತಿಶ್ರೀ ದೇವಸಮುದ್ರದ ಲಕ್ಷ್ಮೀ ನಾರಾಯಣ ದೇವಸ್ಥಾನದ ಗಂಟೆ ವಿಜಯಾಭ್ಯುದಯ ಮೇಲಿನ ಶಾಸನದ ಸಾಲುಗಳು, ಶಾಲಿವಾಹನ ಶಕ ವರುಷಂಗಳ 1717ನೆಯ ಆನಂದನಾಮ ಸಂವತ್ಸರದ ಚೈತ್ರ ಶುದ್ದ 1 ರಲ್ಲು ದೇವಸಮುದ್ರದ ಸರ ದೇಸಾಯಿ ತಿಮ್ಮಯ್ಯನ ಮೊಮ್ಮಗ ಸೀನಜನು ಶ್ರೀಸ್ವಾಮಿಗೆ ಸಮರ್ಪಿಸಿದ ಘಂಟೆ' ಎಂದು ಬರೆಯಲಾಗಿದೆ. ಶಾಸನದಲ್ಲಿ ಉಲ್ಲೇಖಿತ ಕಾಲ ಕ್ರಿ.ಶ.1795ಕ್ಕೆ ಸರಿಹೊಂದುತ್ತದೆ. ಇದರಿಂದಾಗಿ ಆ ಸಮಯದಲ್ಲಿ ದೇವಸಮುದ್ರದಲ್ಲಿ ಸರ ದೇಸಾಯಿಗಳು ಆಡಳಿತ ನಡೆಸುತ್ತಿದ್ದರೆಂದು ತಿಳಿದುಬರುತ್ತದೆ. ವಿಜಯನಗರ ಕಾಲದ ಈ ದೇವಾಲಯವು ಕಾಲಕಾಲಕ್ಕೆ ಆಡಳಿತಗಾರರ ದೈವಭಕ್ತಿಗೆ ಒಳಗಾಗಿ ಪ್ರಭಾವಿಯಾಗಿತ್ತೆಂದು ತಿಳಿಯುತ್ತದೆ ಎಂದು ಮಂಜಣ್ಣ ತಿಳಿಸುತ್ತಾರೆ. ಶಾಸನ ಓದುವಲ್ಲಿ ಗಂಗಾವತಿಯ ಡಾ. ಶರಣಬಸಪ್ಪ ಕೋಲ್ಕಾರ ಹಾಗೂ ಶೋಧನೆಯಲ್ಲಿ ದೇವಸಮುದ್ರದ ವಿದ್ಯಾರ್ಥಿ ಕುರುಗೋಡು ಮಾರುತಿ ಸಹಕರಿಸಿದ್ದಾರೆ.
Nc : VV