ಕನ್ನಡತನವನ್ನು ಬಿಟ್ಟುಕೊಡದ ಮಹಾನ್ ನಟ ಡಾ.ರಾಜಕುಮಾರ : ಬಡಿಗೇರ ಜಿಲಾನಸಾಬ್
ಕಂಪ್ಲಿ:ಏ.24. ರಾಜಕುಮಾರ್ ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ. ಅವರ ಚಲನಚಿತ್ರಗಳು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಯನ್ನು ಗಳಿಸಿವೆ. ಸಾಮಾಜಿಕ ಮತ್ತು ಪೌರಾಣಿಕ ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡ ನಾಡಿನ ಜನತೆಯ ಮನದಲ್ಲಿ ಆಳವಾಗಿ ಅವರು ಬೇರೂರಿದ್ದಾರೆ’ ಎಂದು ಡಾ.ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ನ ಸಂಚಾಲಕ ಬಡಿಗೇರ ಜಿಲಾನಸಾಬ್ ಹೇಳಿದರು.
ಸ್ಥಳೀಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಎದುರುಗಡೆಯಲ್ಲಿರುವ ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವರನಟ ಡಾ.ರಾಜಕುಮಾರ ಜಯಂತಿ ಆಚರಿಸಿ ನಂತರ ಮಾತನಾಡಿ, ರಾಜ್ಕುಮಾರ್ ಅವರು ಕನ್ನಡದ ನಾಡು, ನುಡಿ, ನೆಲ, ಜಲ, ಭಾಷೆಯ ವಿಷಯದಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಅವರು ಕನ್ನಡತನವನ್ನು ಎಂತಹುದೇ ಕ್ಲಿಷ್ಟ ಪರಿಸ್ಥಿತಿಯಲ್ಲೂ ಬಿಟ್ಟುಕೊಡುತ್ತಿರಲಿಲ್ಲ. ಅಂತಹ ಮಹಾನ್ ಚೇತನವನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಉಪಾಧ್ಯಕ್ಷ ಎಸ್.ಯಲ್ಲಪ್ಪ ಮಾತನಾಡಿ, ಮನೋಜ್ಞ ನಟನೆಯ ಮೂಲಕ ಮಾನವೀಯ ಮೌಲ್ಯಗಳ ಶ್ರೇಷ್ಠ ಚಿಂತನೆಗಳನ್ನು ವ್ಯಕ್ತಪಡಿಸುತ್ತಿದ್ದ ಡಾ. ರಾಜ್ಕುಮಾರ್ ತಮ್ಮ ಸರಳ ಜೀವನಶೈಲಿಯಿಂದ ಕನ್ನಡಿಗರು ಸೇರಿದಂತೆ ಎಲ್ಲ ಜನರಲ್ಲಿ ಬೆರೆತಿದ್ದಾರೆ. ಕನ್ನಡದ ಸ್ಪಷ್ಟ ಉಚ್ಚಾರಣೆ ಮೂಲಕ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ಅವರು ಕರ್ನಾಟಕದ ಸಾಂಸ್ಕೃತಿಕ ಶಕ್ತಿಯಾಗಿದ್ದರು’ ಎಂದರು.
ಇಲ್ಲಿ ಡಾ.ರಾಜಕುಮಾರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪ ನಮನದೊಂದಿಗೆ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪರ್ತಕರ್ತರಾದ ಎಸ್.ಯಮನಪ್ಪ, ದ್ಯಾಮನಗೌಡ ಪಾಟೀಲ್, ತರಬೇತಿ ಕೇಂದ್ರದ ಶಿಕ್ಷಕಿಯರಾದ ಎ.ಅಕ್ಕಮಹಾದೇವಿ, ಎನ್.ಜಿ.ಸುಧಾ, ವಿದ್ಯಾರ್ಥಿಗಳಾದ ಗಣೇಶ, ಮಾಣಿಕ್ಯ, ಅರುಣಾ, ಅಶೋಕ, ಅಲ್ಲಾಭಕ್ಷಿ, ರಘುವೀರ್, ರಮೇಶ, ಸಿ.ರಮೇಶ, ಮುಸ್ಕಾನ್, ಅಶ್ವಿನಿ, ರೇಣುಕಾ, ಎಂ.ಅಶ್ವಿನಿ, ರಶ್ಮಿಕಾ, ಪ್ರಮಿಳಾ, ಆಶಾ, ಸೋಯಲ್, ಆಲಿಯಾ ಇದ್ದರು.
24-ಕಂಪ್ಲಿ-03: ಸ್ಥಳೀಯ ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವರನಟ ಡಾ.ರಾಜಕುಮಾರ ಜಯಂತಿ ಆಚರಿಸಲಾಯಿತು.