ನಾಗರಹಾಳು: 16ಜೋಡಿ ಉಚಿತ ಸಾಮೂಹಿಕ ವಿವಾಹ, ಜಾತ್ರಾ ಮಹೋತ್ಸವ ಸಂಭ್ರಮ
ಸಿರುಗುಪ್ಪ: ತಾಲ್ಲೂಕಿನ ನಾಗರಹಾಳು ಗ್ರಾಮದ ಶ್ರೀಬೃಹನ್ಮಠದಲ್ಲಿ ಶರಣ ದೊಡ್ಡಯ್ಯಶಾಸ್ತ್ರಿಗಳ, ಬಸವಮ್ಮ ಅವ್ವನವರ ಪುಣ್ಯಾರಾಧನೆ ಅಂಗವಾಗಿ ಶನಿವಾರ 16ಜೋಡಿ ಉಚಿತ ಸಾಮೂಹಿಕ ವಿವಾಹಗಳು ಜರುಗಿದವು.
ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಬಸವಲಿಂಗಸ್ವಾಮೀಜಿ ಸಂದೇಶ ನೀಡಿ, 'ಗ್ರಾಮೀಣ ಪ್ರದೇಶಗಳಲ್ಲೂ ಜನರು ಅದ್ಧೂರಿ ವಿವಾಹ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಅನಾವಶ್ಯಕ ವೆಚ್ಚ ತಡೆಗೆ ಸಾಮೂಹಿಕ ವಿವಾಹ ಬಡವರಿಗೆ ವರದಾನವಾಗುತ್ತಿವೆ. ಸಮಾಜದಲ್ಲಿ ಸರಳ ವಿವಾಹ ಹೆಚ್ಚು ನಡೆಯಬೇಕು' ಎಂದು ಹೇಳಿದರು.
ಸಿರುಗುಪ್ಪದ ಶ್ರೀಗುರು ಬಸವ ಮಹಾಮಠದ ಬಸವಭೂಷಣಸ್ವಾಮೀಜಿ ಆಶೀರ್ವಚನ ನೀಡಿ, 'ಸಾಮೂಹಿಕ ವಿವಾಹಗಳು ಸಾಮರಸ್ಯದ ಪ್ರತೀಕವಾಗಿವೆ. ಸಮಾಜದಲ್ಲಿ ಸಮಾನತೆ, ಸಹಕಾರ, ಸಹಬಾಳ್ವೆ ಬರಬೇಕಾದರೆ ಪ್ರತಿ ನಗರ, ಹಳ್ಳಿಗಳಲ್ಲಿ ವರ್ಷಕ್ಕೆ ಕನಿಷ್ಠ ಒಂದು ಬಾರಿ ಎಲ್ಲರೂ ಒಂದೆಡೆ ಸೇರಿ ಒಗ್ಗಟ್ಟಿನಿಂದ ಇಂತಹ ಮಾದರಿ ಮದುವೆಯನ್ನು ಮಾಡುವುದು ಅಗತ್ಯವಾಗಿದೆ. ನವಜೋಡಿಗಳು ಭವಿಷ್ಯದಲ್ಲಿ ಜನಿಸುವ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಂತೆ ಸಲಹೆ ನೀಡಿದರು.
ಪುಣ್ಯಾರಾಧನೆ ಅಂಗವಾಗಿ ಹಮ್ಮಿಕೊಂಡಿದ್ದ ಹೇಮರೆಡ್ಡಿ ಮಲ್ಲಮಾಂಬೆಯ ಜೀವನದರ್ಶನ ಪುರಾಣ ಪ್ರವಚನ ಶನಿವಾರ ಮಹಾಮಂಗಲಗೊಂಡಿತು.
ಗಡಿನಾಡ ಕನ್ನಡ ಸಾಹಿತಿ ನಾ.ಮ. ಮರುಳಾರಾಧ್ಯರ ಪುರಾಣ ಪ್ರವಚನಕ್ಕೆ ಎನ್.ಎಂ. ಜಗದೀಶ ಗವಾಯಿಗಳ ಪುರಾಣ ವಾಚನ ಮತ್ತು ಹಾರ್ಮೋನಿಯಂ, ಶಾಂತವೀರಯ್ಯಸ್ವಾಮಿ ದಿಲ್ರುಬಾ, ಅದವಾನಿ ಸಂತೋಷ್ ಕುಮಾರ್ ತಬಲಾಸಾಥ್ ನೀಡಿದರು.
ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು. ಸಹಕರಿಸಿದ ಭಕ್ತರನ್ನು ಗೌರವಿಸಲಾಯಿತು.ವಿವಿಧ ಮಠಗಳ ಶ್ರೀಗಳು, ಹರಗುರು ಚರಮೂರ್ತಿಗಳು, ಶ್ರೀಮಠದ ಬಸವರಾಜಯ್ಯ ತಾತನವರು,
ಶ್ರೀಶರಣ ದೊಡ್ಡಯ್ಯತಾತನವರ ಶಿವಾನುಭವ ಟ್ರಸ್ಟ್ ಪದಾಧಿಕಾರಿಗಳು, ಸಿರುಗುಪ್ಪ ತಾಲ್ಲೂಕಿನ ಮುಖಂಡರು, ನಾಗರಹಾಳು ಗ್ರಾಮ ಸೇರಿದಂತೆ ಸುತ್ತಲಿನ ಹಳ್ಳಿಗಳ ಶ್ರೀಮಠದ ಭಕ್ತರು ಭಾಗವಹಿಸಿದ್ದರು.
ಸಂಜೆ ಶರಣ ದೊಡ್ಡಯ್ಯಶಾಸ್ತ್ರಿಗಳ, ಬಸವಮ್ಮ ಅವ್ವನವರ ರಥೋತ್ಸವ ಭಕ್ತರ ಜಯಘೋಷದೊಂದಿಗೆ ಸಂಭ್ರಮದಿಂದ ಜರುಗಿತು.